logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಎಳೆಗೌರಮ್ಮನ ಮೂರ್ತಿ
ಚೌತಿಹಬ್ಬದ ನಾಲ್ಕನೆಯ ದಿನ ಎಂದರೆ ಅಷ್ಟಮಿಯ ದಿನ ಈ ಮೂರ್ತಿಯನ್ನು ನೀರು ತುಂಬಿದ ಕೊಡದಲ್ಲಿರಿಸಿ ಪೂಜಿಸುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಇದು ಒಂದು ಮನುಷ್ಯಮುಖ ಪ್ರಮಾಣದ ಮುಖ. ಇದನ್ನು ಕೊಡದಲ್ಲಿ ಇಡುವುದಕ್ಕೆ ಅನುಕೂಲವಾಗುವಂತೆ ಇದರ ಕೊರಳನ್ನು ವಿನ್ಯಾಸಗೊಳಿಸಲಾಗಿದೆ. ಯಕ್ಷಗಾನದ ಹಳೆಯ ಸ್ತ್ರೀವೇಷದಂತೆ ಹಿಂದಲೆಯ ಮೇಲ್ಭಾಗದಲ್ಲಿ ಒಂದು ಕಿರೀಟಾಕೃತಿಯೂ ಕೊರಳಲ್ಲಿ ಅಡ್ಡಿಕೆಗಳೂ ಇವ. ಅಂತೆಯೇ ಕಿವಿಗೆ ಓಲೆ, ಮೂಗಿಗೆ ನತ್ತು ಇರಿಸಲು ಅನುಕೂಲವಾಗುವಂತೆ ರಚಿಸಲಾಗಿದೆ. ಮುಂದಿನ ವರ್ಷಗಳಲ್ಲೂ ಇದೇ ಸಂದರ್ಭದಲ್ಲಿ ಈ ಮೂರ್ತಿಯನ್ನು ಬಳಸಿಕೊಳ್ಳುವಂತೆ ಪೂಜೆಯ ಬಳಿಕ ಜೋಪಾನವಾಗಿಡುತ್ತಾರೆ. ಈ ಮೂರ್ತಿಯನ್ನು ಬೇವಿನ ಮರದಿಂದ ತಯಾರಿಸುತ್ತಾರೆ.

ಏಕತಾರಿ/ತಂಬೂರಿ
ಜನಪದ ಸಂಗೀತ ಸಾಧನಗಳಲ್ಲಿ ಒಂದು. ಇದು ಸುಮಾರು ನಾಲ್ಕರಿಂದ ಐದು ಅಡಿ ಉದ್ದವಿದೆ. ಇದರ ಕೆಳಭಾಗದಲ್ಲಿ ಬಿದರಿನ ಕಡ್ಡಿಗಳನ್ನು ಕುಂಬಳಕಾಯಿಯ ಆಕಾರದಲ್ಲಿ ಹೆಣೆದಿದೆ. ಇದರ ಅಲಂಕಾರಕ್ಕಾಗಿ ವಿವಿಧ ಬಣ್ಣಗಳನ್ನು ಲೇಪಿಸಿದೆ. ಇದಕ್ಕೆ ಸುಮಾರು ನಾಲ್ಕರಿಂದ ಐದು ಅಡಿ ಉದ್ದದ ಬಿದರಿನ ಕೋಲನ್ನು ಜೋಡಿಸಿ ಅದರ ಕೊನೆಯ ತುದಿಯಿಂದ ಸ್ವಲ್ಪ ಕೆಳಭಾಗದಲ್ಲಿ ಬೆಣೆ ಜೋಡಿಸಿದ್ದಕ್ಕೆ ಬುರುಡೆಯಿಂದ ಹೊರಟ ತಂತಿಯನ್ನು ಬಿಗಿಯಲಾಗಿದೆ. ಬುಟ್ಟಿಯ ಮೇಲೆ ಹಾದು ಹೋದ ತಂತಿಯ ಬುಟ್ಟಿಗೆ ತಾಗದಂತೆ ನಾಣ್ಯ ಅಥವಾ ಗಡಿಗೆಯ ತುಂಡನ್ನು ಮೇಣದ ಸಹಾಯದಿಂದ ಅಂಟಿಸಿ ಇಟ್ಟಿದ್ದಾರೆ. ಆಗ ಅದರ ನಾದ ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಈ ತರಹದ ಏಕತಾರಿ ಅಪೂರ್ವವಾಗಿದೆ. ದಾಸರ ಪದಗಳನ್ನು ಹಾಡಲು ಏಕತಾರಿಗಳನ್ನು ಬಳಸುತ್ತಾರೆ. ಕೆಲವು ಕಡೆ ಭಜನೆ ಮಾಡುವ ಸಂದರ್ಭಗಳಲ್ಲಿ ಕೂಡ ಅವನ್ನು ಉಪಯೋಗಿಸುತ್ತಾರೆ. ಏಕತಾರಿಯು ತಂತಿವಾದ್ಯ.

ಏತರಾಟೆ/ಕಪ್ಲಿರಾಟೆ
ನೆಲಬಾವಿಯಿಂದ ಎತ್ತುಗಳ ಮೂಲಕ ಕಪ್ಲಿ ಹೊಡೆದು ನೀರನ್ನು ಮೇಲೆತ್ತಲು ಬಳಸುವ ಒಂದು ಸಾಧನ. ಸುಮಾರು ಹತ್ತು ಇಂಚು ವ್ಯಾಸ, ಆರು ಇಂಚು ದಪ್ಪದ ಮರದಿಂದ ತಯಾರಿಸಿದ್ದಾರೆ. ಇದು ವೃತ್ತಾಕಾರದಲ್ಲಿದ್ದು ಅದರ ಹೊರ ಅಂಚಿನಲ್ಲಿ ಹಗ್ಗವು ಅತ್ತಿತ್ತ ಹೊರ ಹೋಗದೆ ಸಲೀಸಾಗಿ ಚಲಿಸಲು ಅನುಕೂಲವಾಗುವಂತೆ ಕೆತ್ತಿರುತ್ತಾರೆ. ರಾಟೆಯ ಮಧ್ಯಭಾಗದಲ್ಲಿ ಸುಮಾರು ಎರಡು ಇಂಚು ವ್ಯಾಸದ ರಂಧ್ರವಿರುತ್ತದೆ. ಅದಕ್ಕೆ ಬಲವಾದ ಸರಳನ್ನು ಜೋಡಿಸಲಾಗತ್ತದೆ. ಭಾರವಾದ ನೀರು/ವಸ್ತುವನ್ನು ಆಳದಿಂದ ಮೇಲೆತ್ತಲು ರಾಟೆಯ ತಂತ್ರವನ್ನು ಅಳವಡಿಸುವುದರಿಂದ ಶ್ರಮವು ತುಂಬಾ ಕಡಿಮೆಯಾಗುತ್ತದೆ.

ಒನಕೆ
ಭತ್ತ ಕುಟ್ಟಿ ಅಕ್ಕಿ ಮಾಡುವುದಕ್ಕೆ ಬಳಕೆಯಾಗುತ್ತಿದ್ದ ಪಾರಂಪರಿಕ ಸಾಧನ. ಅಂತೆಯೇ ಜೋಳ, ನವಣೆ, ಗೋಧಿ ಮುಂತಾದ ಧಾನ್ಯಗಳ ಹೊಟ್ಟನ್ನು ತೆಗೆಯುವುದಕ್ಕೂ ಒನಕೆಯು ಬಳಕೆಯಾಗುತ್ತದೆ. ಇದು ಸುಮಾರು ನಾಲ್ಕರಿಂದ ಐದು ಅಡಿಗಳಷ್ಟು ಎತ್ತರವಾಗಿದ್ದು ಸುಮಾರು ಐದರಿಂದ ಎಂಟು ಇಂಚು ಸುತ್ತಳತೆಯುಳ್ಳದ್ದಾಗಿರುತ್ತದೆ. ಇದರ ತಳಭಾಗದಲ್ಲಿ ಕಬ್ಬಿಣದ ಬಳೆಯನ್ನು ಹಾಕಲಾಗುತ್ತದೆ. ಒರಳಿನಲ್ಲಿ ಧಾನ್ಯಗಳನ್ನು ಹಾಕಿ ನಿಂತುಕೊಂಡು ಒನಕೆಯಿಂದ ಕುಟ್ಟುತ್ತಾರೆ. ಒನಕೆಯನ್ನು ಸಾಗುವಾನಿ, ಬಾರಿ, ಬೋರೆ, ತಾಳೆ, ಜಾಲಿ ಮುಂತಾದ ಭಾರವಾದ ಮತ್ತು ಗಟ್ಟಿಮುಟ್ಟಾದ ಮರಗಳಿಂದ ತಯಾರಿಸುತ್ತಾರೆ. ಒನಕೆಯಿಂದ ಕುಟ್ಟುವ ಒರಳಿನ ಬಳಿ ಒಬ್ಬಾಕೆ ಕುಳಿತುಕೊಂಡು ಮತ್ತು ಇನ್ನೊಬ್ಬಾಕೆ ನಿಂತುಕೊಂಡು (ಒಂದೇ ಒನಕೆಯಿಂದ) ಕುಟ್ಟಬಹುದು. ಇದಲ್ಲದೆ ಪ್ರತ್ಯೇಕ ಒನಕೆಗಳನ್ನು ತೆಗೆದುಕೊಂಡು ಒಂದು ಒರಳಲ್ಲಿ ಇಬ್ಬರು ಅಥವಾ ಕೆಲವೊಮ್ಮೆ ಮೂರು ಮಂದಿ ಕೂಡಾ ಕುಟ್ಟಬಹುದು. ಇದಕ್ಕೆ ಸ್ವಲ್ಪ ಪರಿಣತಿಯ ಅಗತ್ಯವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಒಬ್ಬ ವ್ಯಕ್ತಿಯೇ ಕುಳಿತುಕೊಂಡು ಕುಟ್ಟುವುದಕ್ಕೆ ಕಿರು ಒನಕೆಗಳು ಬಳಕೆಯಾಗುತ್ತವೆ. ಇದು ಸುಮಾರು ಮೂರು ಅಡಿಗಳಷ್ಟು ಎತ್ತರವಿರುತ್ತದೆ ಅಷ್ಟೆ.

ಒರಳುಕಲ್ಲು
ಜೋಳದ ಜರಗು, ಭತ್ತ, ಗೋಧಿ ಮುಂತಾದುವನ್ನು ಕುಟ್ಟುವುದಕ್ಕೂ ಚಟ್ನಿ, ಹಿಂಡಿ(ಖಾರ ತಿಂಡಿ) ಇತ್ಯಾದಿಗಳನ್ನು ಅರೆಯುವುದಕ್ಕೂ ಬೇಳೆ ಹೂರಣವನ್ನು ರುಬ್ಬುವುದಕ್ಕೂ ಬಳಸುವ ಸಾಧನ. ಒರಳುಕಲ್ಲನ್ನು ಮನೆಯಲ್ಲಿ ಮುಖ್ಯವಾಗಿ ಎರಡು ಕಡೆಗಳಲ್ಲಿ ಸ್ಥಾಪಿಸುತ್ತಾರೆ-ಅಡುಗೆಮನೆ ಮತ್ತು ಪಡಸಾಲೆಗಳಲ್ಲಿ. ಅಡುಗೆ ಮನೆಯಲ್ಲಿನ ಒರಳು ಕಲ್ಲಿನಲ್ಲಿ ಹೆಚ್ಚಾಗಿ ರುಬ್ಬುವ ಮತ್ತು ಅರೆಯುವ ಕ್ರಿಯೆಗಳು ನಡೆಯುತ್ತವೆ. ಪಡಸಾಲೆ ಅಥವಾ ಕಟ್ಟೆಗಳ ಮೇಲೆ ಇಟ್ಟಿರುವ ಒರಳು ಕಲ್ಲು ಕುಟ್ಟುವುದಕ್ಕೆ ಬಳಕೆಯಾಗುತ್ತದೆ. ಸಾಮಾನ್ಯವಾಗಿ ರುಬ್ಬುವ ಮತ್ತು ಅರೆಯುವ ಒರಳು ಕಲ್ಲುಗಳು ಸುಮಾರು ಆರು ಇಂಚು ವ್ಯಾಸ ಮತ್ತು ಸುಮಾರು ಆರರಿಂದ ಎಂಟು ಇಂಚು ಆಳವಿರುತ್ತವೆ. ರುಬ್ಬುಗುಂಡುಗಳನ್ನು ಮತ್ತು ಮಡ್ಡೊನಕೆ/ಮೊಂಡೊನಕೆಯನ್ನು ಬಳಸಿಕೊಂಡು ರುಬ್ಬುವ, ಅರೆಯುವ ಕೆಲಸ ಮಾಡುತ್ತಾರೆ. ಒರಳು ಕಲ್ಲಿನ ಬಾಯಿಯು ಸುಮಾರು ಅರ್ಧ ಅಡಿ ವ್ಯಾಸವಿರುತ್ತದೆ. ಒನಕೆಗಳನ್ನು ಬಳಸಿ ಇದರಲ್ಲಿ ಕುಟ್ಟುವ ಕೆಲಸವನ್ನು ಮಾಡುತ್ತಾರೆ. ಒರಳು ಕಲ್ಲಿಗೆ ಸಂಬಂಧಿಸಿ ಅದರ ಮೇಲೆ ಕುಳಿತುಕೊಳ್ಳಬಾರದು, ಅದನ್ನು ತುಳಿಯಬಾರದು ಮುಂತಾದ ನಿಷೇಧಗಳಿವೆ. ಮದುವೆಯಂಥ ಸಮಾರಂಭಗಳಲ್ಲಿ ಇದನ್ನು ಪೂಜಿಸುವ ಸಂಪ್ರದಾಯ ಜನಪದರಲ್ಲಿದೆ. ಒರಳು ಕಲ್ಲುಗಳನ್ನು ಕಗ್ಗಲ್ಲಿಂದಲೇ ತಯಾರಿಸಲಾಗುತ್ತದೆ. ರೈಸ್ ಮಿಲ್ಲುಗಳು, ಮಿಕ್ಸಿ-ಗ್ರೈಂಡರ್‌ಗಳು ಬಂದ ಬಳಿಕ ಒರಳು ಕಲ್ಲುಗಳ ಬಳಕೆ ಮೂಲೆಗುಂಪಾಗತೊಡಗಿವೆ. ಆದರೆ ಆಚರಣೆಯಲ್ಲಿ ಉಳಿದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಪ್ರತಿ ಮನೆಗಳ ಅಡುಗೆಮನೆಯ ಮೂಲೆಯಲ್ಲಿ ಒರಳು ಕಲ್ಲನ್ನು ಪ್ರತಿಷ್ಠಾಪಿಸುದನ್ನು ಈಗಲೂ ಕಾಣಬಹುದು.

ಔಂಗು ಗಡಿಗೆ
ಅರಿವಿ ಎಂಬ ಸಿಹಿ ಪದಾರ್ಥ ಮಾಡುವಾಗ (ಗೋಧಿ ಹಿಟ್ಟು, ಬೆಲ್ಲವನ್ನು ನೀರಿನಿಂದ ಮಿಶ್ರಣ ಮಾಡಿ ಸುಮಾರು ಮೂರು ನಾಲ್ಕು ತಾಸು ಬಿಡುತ್ತಾರೆ) ಬಳಕೆಯಾಗುವ ವಸ್ತು. ಇದು ಸುಮಾರು ಹದಿನಾಲ್ಕು ಇಂಚು ಎತ್ತರ, ಕಂಠದ ಬಾಯಿಯ ವ್ಯಾಸ ಒಂಭತ್ತು ಇಂಚು, ನಡು ಪಟ್ಟಿಯ ಸುತ್ತಳತೆ ಐವತ್ತು ನಾಲ್ಕು ಇಂಚು ಇರುತ್ತದೆ. ಕಂಠದ ಕೆಳಭಾಗದಲ್ಲಿ ಸುತ್ತಲೂ ನಾಲ್ಕು ಕಡೆ ಬಾಣ, ಸಂಕಲನ ಚಿಹ್ನೆ, ತ್ರಿಭುಜ, ವೃತ್ತಾಕಾರದ ರಂಧ್ರಗಳಿರುತ್ತವೆ. ಈ ಔಂಗು ಗಡಿಗೆಯನ್ನು ಒಲೆ ಮೇಲೆ ಬೋರಲು ಹಾಕಿ ತೆಳುವಾದ ಬಟ್ಟೆಯನ್ನು ಅದರ ಮೇಲೆ ಹಾಸಿ ನೆನಸಿಟ್ಟು, ಲಟ್ಟಿಸಿದ ಅರಿವಿಯನ್ನು ಸುಡಲು ಈ ಗಡಿಗೆಯನ್ನು ಬಳಸುತ್ತಾರೆ.

ಕಡಬತ್ ಕಲ್ಲು
ಕಾರ, ಹಿಂಡಿ (ಒಂದು ತೆರನ ಚಟ್ನಿ) ಮಸಾಲೆ, ಕಷಾಯಹುಡಿ, ಚಟ್ನಿ ಮುಂತಾದವುಗಳನ್ನು ಅರೆಯಲು, ಕುಟ್ಟಲು ಬಳಸುವ ಪರಿಕರ. ಇದು ಒಂದು ಚಿಕ್ಕ ದೋಣಿಯಾಕಾರದಲ್ಲಿರುತ್ತದೆ. ಒಂದು ಅಡಿ ಉದ್ದ ಅರ್ಧ ಅಡಿ ಎತ್ತರವಿರುತ್ತದೆ. ಕಡಬತ್ ಕಲ್ಲುಗಳಲ್ಲಿ ವ್ಯತ್ಯಾಸಗಳಿವೆ. ಈ ಕಲ್ಲಿನಿಂದ ಮಸಾಲೆ ಅರೆದು ಸಾಂಬಾರು ಮಾಡಿದರೆ ಬಹಳ ರುಚಿಯಾಗಿರುತ್ತದೆ ಹಾಗೂ ಹೆಚ್ಚುಕಾಲ ಕೆಡದಂತೆ ಇರತುತದೆ ಎನ್ನವುದು ಜನಪದರ ಅನುಭವ. ಗ್ರಾಮೀಣ ಪ್ರದೇಶದ ಜನರು ಇಂದಿಗೂ ಈ ಕಲ್ಲಿನಲ್ಲೇ ಕಾರ, ಮಸಾಲೆ ಅರೆಯುತ್ತಾರೆ. ಬಳಪದ ಕಲ್ಲಿನಿಂದ ಇದನ್ನು ತಯಾರಿಸುತ್ತಾರೆ.

ಕಡೆಗೋಲು/ ಮಂತು
ಮೊಸರು ಕಡೆಯಲು ಸಾರ್ವತ್ರಿಕವಾಗಿ ಬಳಸುವ ಸಾಧನ. ಕಡೆಯುವ (ಮೊಸರನ್ನು) ಕೋಲು ಎಂಬುದೇ ಕಡೆಗೋಲು ಎಂದು ಸ್ವರೂಪ ಪಡೆಯಿತು. ಇದರಲ್ಲಿ ಮೊಸರನ್ನು ಕಡೆಯುವ ಮುದ್ದೆ/ಗಡ್ಡೆಯು ಮೂರು ಕಿರು ಹಂತಗಳಲ್ಲಿ ಎಸಳೆಸಳಾಗಿ ವಿನ್ಯಾಸಗೊಂಡಿರುತ್ತದೆ. ಮರದ ಒಂದೇ ತುಂಡಿನಿಂದ ಕಡೆಗೋಲನ್ನು ತಯಾರಿಸುತ್ತಾರೆ. ಕಡೆಗೋಲು ಮುದ್ದೆಯನ್ನು ತಯಾರಿಸಿ ಹಿಡಿಕೆಯನ್ನು ಜೋಡಿಸುವ ಕ್ರಮವೂ ಇದೆ. ಈ ಹಿಡಿಕೆ ಕೂಡ ಎರಡು ಅಂಗೈಗಳ ನಡುವೆ ಇರಿಸಿ ಅತ್ತಿತ್ತ ತಿರುಗಿಸುವಾಗ ಜಾರದಂತೆ ಹಿಡಿತಯನ್ನು ಉಳಿಸಿಕೊಳ್ಳುವ ತೆರನ ವಿನ್ಯಾಸವುಳ್ಳದ್ದು. ಕಡೆಗೋಲುಗಳು ವಿಭಿನ್ನ ಗಾತ್ರಗಳಲ್ಲಿರುತ್ತವೆ. ಸಣ್ಣ ಪ್ರಮಾಣದ ಅಂದರೆ ಸುಮಾರು ಎರಡು ಲೀಟರ್‌ನಷ್ಟು ಮೊಸರನ್ನು ಸಣ್ಣ ಕಡೆಗೋಲಿನಿಂದ ಕಡೆಯಬಹುದು. ಇಂಥ ಕಡೆಗೋಲಿನ ಬೊಡ್ಡೆಯು ಸುಮಾರು ಎಂಟರಿಂದ ಹತ್ತು ಇಂಚುಗಳ ಸುತ್ತಳತೆಯದಾಗಿದ್ದು ಹಿಡಿಕೆಯು ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರವಿರುತ್ತದೆ. ಇನ್ನೂ ಹೆಚ್ಚು ಪ್ರಮಾಣದ ಮೊಸರನ್ನು ಕಡೆಯಲು ಮಧ್ಯಮ ಗಾತ್ರದ ಕಡೆಗೋಲು ಬಳಕೆಯಾಗುತ್ತದೆ. ಮೊಸರಿನ ಪ್ರಮಾಣವೂ ತುಂಬ ಹೆಚ್ಚಾಗಿದ್ದಾಗ ಅದನ್ನು ಸುಮಾರು ನಾಲ್ಕು ಅಡಿ ಎತ್ತರದ ಬಿದಿರ ಅಂಡೆ/ಮರ ಅಥವಾ ಲೋಹದ ಪಾತ್ರೆಗಳಲ್ಲಿ ಹಾಕಿ ಬೃಹತ್ ಗಾತ್ರದ ಕಡೆಗೋಲಿನಿಂದ ನಿಂತುಕೊಂಡು ಕಡೆಯಲಾಗುತ್ತದೆ. ಇಂಥ ಕಡೆಗೋಲುಗಳ ಬೊಡ್ಡೆಯು ಸುಮಾರು ಒಂದರಿಂದ ಒಂದೂವರೆ ಅಡಿಗಳಷ್ಟು ಸುತ್ತಳತೆಯದಾಗಿದ್ದು ಅದರ ಹಿಡಿಕೆಯು ಸುಮಾರು ಐದು ಅಡಿಗಳಷ್ಟು ಉದ್ದವಿರುತ್ತದೆ. ಕಡೆಗೋಲನ್ನು ವಿಶಿಷ್ಟ ಜಾತಿಯ ಮರಗಳಿಂದ ನಿರ್ಮಿಸುತ್ತಾರೆ. ಸಾಮಾನ್ಯವಾಗಿ ತೇಗ, ಹಲಸು ಮುಂತಾದ ಮರಗಳನ್ನು ಬಳಸಲಾಗುತ್ತದೆ. ಮಂತಿನ ರಚನೆಯಲ್ಲೂ ಬಡಗಿಗಳು ಕಾಷ್ಟ ಕೌಶಲವನ್ನು ತೋರುವುದಿದೆ. ಇದರ ಗಡ್ಡೆಯ ಎಸಳುಗಳು ಸಮ ಸಂಖ್ಯೆಯಲ್ಲೆ ಇರುತ್ತವೆ. ಮೊಸರು ಕಡೆಯಲು ಯಂತ್ರಗಳು ಬಂದ ಬಳಿಕ ಪಾರಂಪರಿಕ ಕಡೆಗೋಲುಗಳು ವಸ್ತು ಸಂಗ್ರಹಾಲಯದ ಸಾಧನಗಳಾಗಿ ತಮ್ಮ ಜಾಗವನ್ನು ತೆರವು ಮಾಡುತ್ತಿವೆ. ಜತೆಗೆ, ಮುಂಜಾನೆಯ ತಂಪು ಹೊತ್ತಿನಲ್ಲಿ ಮೊಸರು ಕಡೆಯುತ್ತ ಜನಪದ ಮಹಿಳೆಯರು ಹಾಡಿಕೊಳ್ಳುತ್ತಿದ್ದ ಉದಯರಾಗ/ಜನಪದ ಹಾಡುಗಳೂ ಮರೆಯಾಗುತ್ತಿವೆ.

ಕತ್ತಿ
ಎಮ್ಮೆ ಕೋಣಗಳ ಮೈಯ ಕೂದಲನ್ನು ಹೆರೆಯಲು ಬಳಸುವ ಕಿರುಗತ್ತಿ. ಇದರಲ್ಲಿ ಹಿಡಿಕೆಯು ಮರದ್ದಾಗಿದ್ದು ಕತ್ತಿಯು ಕಬ್ಬಿಣದಿಂದ ನಿರ್ಮಿತವಾಗಿದೆ. ಒಟ್ಟು ಉದ್ದ ಸುಮಾರು ಹತ್ತು ಇಂಚು. ಕತ್ತಿಯ ಅಲಗು ಕಬ್ಬಿಣದ ತೆಳುತಗಡಿನಿಂದ ರಚಿತವಾಗಿದೆ. ಎಮ್ಮೆ ಕೋಣಗಳ ಕೂದಲುಗಳನ್ನು ಹೆರೆಯದಿದ್ದರೆ. ಅದರಲ್ಲಿ ಕ್ರಿಮಿ-ಕೀಟ-ಹೇನುಗಳು ತುಂಬುವುದಲ್ಲದೆ ಕೊಳೆ, ಕೆಸರು ಕೂಡ ತುಂಬುತ್ತದೆ. ಇದರಿಂದ ಅವಕ್ಕೆ ಅಸ್ವಸ್ಥತೆಯುಂಟಾಗುತ್ತದೆ ಮತ್ತು ಕೊಳಕಾಗಿರುತ್ತವೆ. ಇದನ್ನು ನಿವಾರಿಸಲು ಕತ್ತಿಯ ಬಳಕೆ ಪಶುಪಾಲಕರಿಗೆ ತುಂಬ ಅಗತ್ಯ.

ಕದರು
ನೆಲಬಾವಿಯಿಂದ ಎತ್ತುಗಳ ಮೂಲಕ ಕಪ್ಲಿ ಹೊಡೆದು ನೀರನ್ನು ಮೇಲೆತ್ತಲು ಬಳಸುವ ಮತ್ತೊಂದು ಸಾಧನ. ಇದು ಸುಮಾರು ಮೂರು ಅಡಿ ಉದ್ದದ ಕಂಭಾಕಾರದಲ್ಲಿದ್ದು ಒಂದು ಅಡಿ ಸುತ್ತಳತೆ ಇರುತ್ತದೆ. ಇದರ ಎರಡು ತುದಿಗಳಲ್ಲಿ ಸುಮಾರು ಅರ್ಧ ಅಡಿ ಉದ್ದದ ಕಬ್ಬಿಣದ ಸರಳನ್ನು ಜೋಡಿಸಲಾಗುತ್ತದೆ. ಕಂಭಾಕಾರದ ಮಧ್ಯಭಾಗದಲ್ಲಿ ಸುತ್ತಲೂ ತಿರುಪಿನಾಕಾರದಲ್ಲಿ ಕೊರೆದು ಅದರ ಮೂಲಕ ಹೂಟೆ ಹಗ್ಗವು ಸಲೀಸಾಗಿ ತಿರುಗಲು ಅನುವಾಗುವಂತೆ ರಚನೆ ಇರುತ್ತದೆ. ಕದರನ್ನು ಹುಣಸೆ ಮರದಿಂದ ತಯಾರಿಸುತ್ತಾರೆ. ಕಪ್ಲಿಬಾವಿಗಳು ವಿರಳವಾಗಿರುವುದರಿಂದ ಈಗ ಇವುಗಳ ಬಳಕೆ ನಿಂತು ಹೋಗುವ ಸ್ಥಿತಿಯಲ್ಲಿದೆ.


logo