logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಆಂಜನೇಯ ವಿಗ್ರಹ
ರುದ್ರಾವತಾರಿ, ರಾಮಭಕ್ತ ಹನುಮಂತ ಜನಸಾಮಾನ್ಯರಿಗೆ ಶ್ರೇಷ್ಠ ಸ್ವಾಮಿನಿಷ್ಠ ದೇವತೆ ಶಕ್ತಿ ಹಾಗೂ ಸಾಹಸಗಳಿಗೆ ಹೆಸರಾದ ಆಂಜನೇಯನನ್ನು ದೇವಾಲಯಗಳಲ್ಲಿ ಗುಡಿಕಟ್ಟಿ ಪೂಜಿಸುತ್ತಾರೆ. ಆಂಜನೇಯ ವಿಗ್ರಹವನ್ನು ಮನೆಗಳಲ್ಲಿ ಪೂಜಿಸುವ ವಾಡಿಕೆಯೂ ಇದೆ. ಮನೆ ಹಾಗೂ ದೇವಾಲಯ ಎರಡು ಕಡೆಗಳಲ್ಲಿಯೂ ಪೂಜಿಸಬಹುದು. ಈ ವಿಗ್ರಹವನ್ನು ಬೆಣಚುಕಲ್ಲಿನಲ್ಲಿ ಕೆತ್ತಿದೆ. ಸುಮಾರು ಏಳು ಇಂಚು ಎತ್ತರ, ಒಂದು ಇಂಚು ದಪ್ಪವಿರುವ ಚಪ್ಪಟೆ ಕಲ್ಲಿನ ಮೇಲೆ ಕೆತ್ತನೆ ಮಾಡಲಾಗಿದೆ. ಹಿಂಭಾಗವು ನಯವಾಗಿ ಸಮತಟ್ಟಾಗಿದೆ. ಆಂಜನೇಯನು ನಿಂತ ಭಂಗಿಯಲ್ಲಿದ್ದು ಎಡಕ್ಕೆ ಮುಖ ಮಾಡಿದ್ದಾನೆ. ಎಡಗೈಯಲ್ಲಿ ಸಂಜೀವಿನಿ ಪರ್ವತ ಹಿಡಿದಿದ್ದರೆ ಬಲಗೈಯನ್ನು ಸೊಂಟದ ಮೇಲಿಟ್ಟು ವೀರ ಭಂಗಿಯಲ್ಲಿ ನಿಂತಿದ್ದಾನೆ. ಬಾಲವು ಬಲದಿಂದ ಎಡಮುಖವಾಗಿ ತಲೆಯವರಗೆ ಹರಿದಿದೆ. ಆಂಜನೇಯ ಮೂರ್ತಿಯ ಎಡಬದಿಯಲ್ಲಿ ಆಂಜನೇಯ ಯಂತ್ರದ ರೇಖಾ ಚಿತ್ರವಿದೆ.

ಆಟ/ಆಟಿಕೆ
ಸಮುದಾಯದ ಪಾರಂಪರಿಕ ಜ್ಞಾನ ಕಿರಿಯ ತಲೆಮಾರಿಗೆ ಹಸ್ತಾಂತರವಾಗುವುದಕ್ಕೆ ಪೂರಕವಾದ ಪರಿಕರಗಳನ್ನು ಜನಪದರು ನಿರ್ಮಿಸಿಕೊಂಡಿದ್ದಾರೆ. ಅವರ ಜಾಣ್ಮೆಗೆ ಉದಾಹರಣೆಗಾಗಿ ಗ್ರಾಮೀಣ ಮಕ್ಕಳು ನಲಿಯುತ್ತ ಆಟವಾಡುತ್ತ ಕಲಿತುಕೊಳ್ಳುವುದಕ್ಕೆ ಸೂಕ್ತವಾದ, ಅವರ ಮನಕ್ಕೆ ಮುದವನ್ನೂ ಆಸಕ್ತಿಯನ್ನೂ ತರಬಲ್ಲ, ಅನೇಕ ಆಟಿಕೆಗಳಿವೆ. ಇವು ಕ್ಷಿಪ್ರಗತಿಯಲ್ಲಿ ಮಕ್ಕಳ ಬೌದ್ಧಿಕ ವಿಕಾಸವನ್ನು ಮಾಡುವಂಥವು ಈ ವಿಭಾಗದಲ್ಲಿ ಅಂತಹ ವಸ್ತುಗಳನ್ನು ಪರಿಚಯಿಸಲು ಆರಂಭಿಸಿದ್ದೇವೆ. ಬೀಸುವ ಕಲ್ಲು, ಮೊರ, ಬುಟ್ಟಿ, ಗೊಂಬೆಗಳು ಮುಂತಾದವುಗಳ ಮೂಲಕ ಅ ಮಕ್ಕಳಿಗೆ ಗ್ರಾಮೀಣ ಬದುಕಿನ ಸೊಗಡನ್ನುಣಿಸಿ ಮುಂದಿನ ದಿನಗಳಿಗೆ ಅವರನ್ನು ಅಣಿಮಾಡುವ ಕೆಲಸವನ್ನು ಜನಪದರು ಕೌಶಲಪೂರ್ಣವಾಗಿ ನಿರ್ವಹಿಸುತ್ತಾರೆ.

ಆನೆಗೊಂಬೆ
ಮಕ್ಕಳ ಆಟಿಕೆಗಾಗಿ ಬಳಸುವ ವಸ್ತು. ಇದು ಸುಮಾರು ನಾಲ್ಕೂವರೆ ಇಂಚು ಎತ್ತರ, ನಾಲ್ಕು ಇಂಚು ಅಗಲವಿದೆ. ಇದನ್ನು ಮಕ್ಕಳು ಆಟಿಕೆಗಾಗಿ ಬಳಸುತ್ತಾರೆ. ಸೂಕ್ಷ್ಮಕೆತ್ತನೆಯಿಂದ ಬಳಪದ ಕಲ್ಲಿನಲ್ಲಿ ಇದನ್ನು ಶಿಲ್ಪಿ ಕೆತ್ತಿದ್ದಾನೆ.

ಆಲೆಮೆನ ಕತ್ತಿ(ಹನುಮಂತ)
ಆಲೆಮನೆಯಲ್ಲಿ ಬೆಲ್ಲದ ಪಾಕವು ತಳಹಿಡಿಯುವುದನ್ನು ಕೆರೆಯುವ/ಎಬ್ಬಿಸುವ ಸಣ್ಣ ಕತ್ತಿ. ಕಬ್ಬಿಣದ ತಗಡು ತುದಿಗೆ ಸಾಗುತ್ತ ಅಗಲ ಹೆಚ್ಚುತ್ತಾ ಹೋಗುವಂತೆ ಇದರ ರಚನೆ ಇದೆ. ಸುಮಾರು ಹತ್ತು ಇಂಚು ಉದ್ದ. ತುದಿಯಲ್ಲಿ ಎರಡೂವರೆ ಇಂಚು ಮತ್ತು ಬುಡದಲ್ಲಿ ಒಂದೂವರೆ ಇಂಚು ಅಗಲ. ತುದಿಯು ಚೂಪಾಗಿರದೆ ದೋಸೆ ಸಟ್ಟುಗದ ಆಕಾರದಲ್ಲಿದೆ. ಇದಕ್ಕೆ ಸರಳವಾದ ಒಂದು ಮರದ ಹಿಡಿಯಿದ್ದು ಇದು ಸುಮಾರು ಎಂಟು ಇಂಚು ಉದ್ದವಿದೆ. ಈ ಕತ್ತಿಯು ನಿಜವಾಗಿಯೂ ಬಹೂಪಯೋಗಿ. ಕಬ್ಬಿನ ಗದ್ದೆಗಳಲ್ಲಿ ಕಬ್ಬನ್ನು ಕಡಿಯಲು ಅದರ ಗರಿಗಳನ್ನು ಸವರಲು ಕೂಡ ಇದು ಉಪಯೋಗಕ್ಕೆ ಬರುತ್ತದೆ. ಆಲೆಮನೆ ಕತ್ತಿಯನ್ನು ಹೆಣ್ಮಕ್ಕಳು ಬಳಸಬಾರದೆಂಬ ನಿಷೇಧವಿದೆ. ಅದಕ್ಕಾಗಿಯೇ ಇದನ್ನು ತುಳಿಯಬಾರದು, ದಾಟಬಾರದು ಮುಂತಾದ ನಿಷೇಧಗಳೂ ಇವೆ. ಆಲೆಮೆನೆಯಲ್ಲಿ ಹೆಣ್ಮಕ್ಕಳಿಗೆ ಪ್ರವೇಶವೂ ನಿಷಿದ್ಧವಾಗಿದೆ. ಮಲೆನಾಡಿನಲ್ಲಿ ಈ ನಿಷೇಧವಿಲ್ಲ ಎಲ್ಲರಿಗೂ ಮುಕ್ತ ಅವಕಾಶವಿದೆ. ಇದಕ್ಕೆ ಹನುಮಂತ(ಬ್ರಹ್ಮಚಾರಿ) ಎಂಬ ಹೆಸರು ಇದೆ.


logo