logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಎಡೆಕುಂಟೆ
ಇದು ಮುಖ್ಯವಾಗಿ ಬೆಳೆಗಳ ಸಾಲುಗಳ ಮಧ್ಯದಲ್ಲಿನ ಕಳೆಯನ್ನು ಕೀಳುವುದಕ್ಕೆ ಮತ್ತು ಬೆಳೆಗಳ ಬುಡಕ್ಕೆ ನಿರ್ದಿಷ್ಟ ಪ್ರಮಾಣದ ಮಣ್ಣನ್ನು ಹೇರುವುದಕ್ಕೆ ಬಳಕೆಯಾಗುತ್ತದೆ. ಅದಕ್ಕಾಗಿಯೇ ಇದಕ್ಕೆ ಎಡೆಕುಂಟೆ ಎಂದು ಹೆಸರು. ಎರಡು ಸಾಲುಗಳಲ್ಲಿ ಬೆಳೆದಿರುವ ಬೆಳೆಗಳ ಮಧ್ಯೆ ಇದನ್ನು ಹಾಯಿಸಿದಾಗ ಕಳೆಗಿಡಗಳು ಕಿತ್ತುಹೋಗಿ ನಾಶವಾಗುತ್ತವೆ. ಎರಡನೆ ಹಂತದಲ್ಲಿ ಇದರ ಬಳಕೆಯು ಬೆಳೆಯ ಕೆಲವು ಬೇರುಗಳನ್ನು ಹರಿಯುವುದಾಗಿರುತ್ತದೆ (ಜೊತೆಗೆ ಕಳೆಕೂಡಾ ನಾಶವಾಗುತ್ತದೆ). ಇದರಿಂದ ಬೆಳೆಯಲ್ಲಿ ಹೊಸ ಬೇರುಗಳು ಸಮೃದ್ಧವಾಗಿ ಮೂಡಿಬರುತ್ತವೆ ಎನ್ನವುದು ರೈತರ ಅಭಿಪ್ರಾಯ. ಮೂರನೆ ಹಂತದಲ್ಲಿ ಬೆಳೆಯ ಬುಡಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಎಡೆಯ ಮಣ್ಣನ್ನು ಒದಗಿಸುವುದೇ ಇದರ ಉದ್ದೇಶವಾಗಿರುತ್ತದೆ. ಒಂದನೇ ಎರಡನೇ ಹಂತಗಳಲ್ಲಿ ಎಡೆಕುಂಟೆಯ ತಾಳಿನ ರಂಧ್ರದಲ್ಲಿ ಮಣ್ಣು ಹಿಂದಕ್ಕೆ ಬೀಳುತ್ತಾ ಹೋದರೆ ಮೂರನೆ ಹಂತದಲ್ಲಿ ತಾಳಿನ ಈ ರಂಧ್ರವನ್ನು ಹಗ್ಗ/ಬಳ್ಳಿಯನ್ನು ಸುತ್ತಿ ಮುಚ್ಚಿಬಿಡುವುದರಿಂದ ಮಣ್ಣು ಹಿಂದಕ್ಕೆ ಬೀಳದೆ ಬದಿಗಳಿಂದ ಸರಿದು ಬೆಳೆಗಳ ಬುಡಕ್ಕೆ ಬೀಳುತ್ತದೆ. ಎತ್ತುಗಳ ನೊಗಕ್ಕೆ ಎಡೆಕುಂಟೆಯನ್ನು ಹಗ್ಗದ ಸಹಾಯದಿಂದ ಕಟ್ಟಲಾಗುತ್ತದೆ. ಒಂದು ಕುಂಟೆಯನ್ನಷ್ಟೆ ಬಳಸುವಾಗ ನೊಗವು ಚಿಕ್ಕದಾಗಿರುತ್ತದೆ. ಮಣ್ಣನ್ನು ಬೆಳೆಯ ಬುಡಕ್ಕೆ ಹಾಕುವಾಗ ಸಾಮಾನ್ಯವಾಗಿ ಒಂದೇ ಕುಂಟೆಯನ್ನು ಕಟ್ಟುತ್ತಾರೆ. ಎರಡು ಅಥವಾ ಮೂರು ಮೂರು ಕುಂಟೆಗಳನ್ನು ಬಳಸುವಾಗ ದೊಡ್ಡ ನೊಗವನ್ನು (ಸುಮಾರು ಹನ್ನೆರಡು ಗೇಣು) ಕಟ್ಟುತ್ತಾರೆ. ಕುಂಟೆಯಲ್ಲಿ ಈಸು (ನೊಗಕ್ಕೆ ಜೋಡಿಸುವ ಭಾಗ), ತಾಳು (ದಿಂಡು ಮತ್ತು ಕುಡಗಳನ್ನು ಜೋಡಿಸುವ ಮರದ ಪಟ್ಟಿ), ಕುಡ(ಕಳೆಯನ್ನು ಕತ್ತರಿಸುವ ಮತ್ತು ಮಣ್ಣನ್ನು ಅಗೆಯುವ ಭಾಗ), ಮೇಳಿ (ಹಿಡಿಕೆ)-ಎಂಬ ಭಾಗಗಳಿವೆ. ಮಣ್ಣು ಗಟ್ಟಿಯಾಗಿದ್ದಾಗ ಕುಂಟೆಗೆ ಇನ್ನಷ್ಟು ಒತ್ತಡ ಹಾಕಲು ಬ್ಯಾಕೋಲು/ಕವೆಗೋಲು/ಕೊಕ್ಕೆಕೋಲನ್ನು ಬಳಸುತ್ತಾರೆ (ಇದು ಸುಮಾರು ಮೂರು, ಮೂರೂವರೆ ಅಡಿ ಎತ್ತರವಿರುತ್ತದೆ). ಅಗತ್ಯವಿದ್ದಾಗ ಬೆಳೆಗಳ ಮಧ್ಯೆ ನೀರು ಹರಿಸಿಕೊಂಡು ಎಡೆನಾಟಿ ಮಾಡುವಾಗಲೂ ಎಡೆಕುಂಟೆಯ ಉಪಯೋಗವಾಗುತ್ತದೆ.

ಎಣ್ಣೆಕಾಯಿ
ಉರಿಸಿದ ದೀಪಗಳಲ್ಲಿ ಎಣ್ಣೆ ಮುಗಿಯುತ್ತಿದ್ದಂತೆ ಮತ್ತೆ ಮತ್ತೆ ಎಣ್ಣೆ ಎರೆಯಲು ಇದನ್ನು ಬಳಸುತ್ತಾರೆ. ದೀಪ ಉರಿಯುತ್ತಿರುವಾಗಲೆ ದೀಪ ಆರದಂತೆ ಎಣ್ಣೆ ಹಾಕುವಂತಿರುವ ನಳಿಗೆಯುಳ್ಳ ಲೋಹದ ಪಾತ್ರೆ. ಇದು ಕಿತ್ಲಿ (ಏeಣಣಟe) ಆಕಾರದಲ್ಲಿದೆ. ಸ್ಥಳೀಯರು ಇದನ್ನು ಎಣ್ಣೆಕಾಯಿ ಎನ್ನುತ್ತಾರೆ. ಇದರಲ್ಲಿ ಸುಮಾರು ಒಂದು ಲೀಟರ್‌ನಷ್ಟು ಎಣ್ಣೆಯನ್ನು ಹಾಕಿ ಇಟ್ಟುಕೊಳ್ಳಬಹುದು. ಇದನ್ನು ತಾಮ್ರ, ಕಂಚು, ಹಿತ್ತಾಳೆ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ.

ಎತ್ತಿನ ಕೊಂಬಿನ ನಶ್ಯಡಬ್ಬಿ
ನಶ್ಯ ಹಾಕುವವರು ನಶ್ಯ ತುಂಬಿಟ್ಟುಕೊಳ್ಳಲು ಬಳಸುವ ಡಬ್ಬಿ. ಇದು ಸುಮಾರು ೨.೪ ಇಂಚು ಎತ್ತರವಿದೆ. ಸುಮಾರು ೩ ಇಂಚು ವ್ಯಾಸವನ್ನು ಹೊಂದಿದೆ. ಎತ್ತಿನ ಕೊಂಬಿನಿಂದ ತಯಾರಿಸಿದ್ದಾರೆ. ಎತ್ತಿನ ಕೊಂಬಿನ ತುದಿಭಾಗವು ಇದಕ್ಕೆ ಉಪಯೋಗವಾಗಿದೆ. ಇತ್ತೀಚೆಗೆ ಲೋಹದ ನಶ್ಯ ಡಬ್ಬಿಗಳು ಬಂದ ಮೇಲೆ ಇದರ ಬಳಕೆ ಬಹಳ ಕಡಿಮೆಯಾಗಿದೆ. ವಿವಿಧ ರೂಪದ ನಶ್ಯ ಡಬ್ಬಿಗಳನ್ನು ನೋಡಬಹುದಾಗಿದೆ. ಬೆಳ್ಳಿ, ಸಿಲ್ವರ್, ತೆಂಗಿನ ಚಿಪ್ಪು,ಗಾಜು, ಪ್ಲಾಸ್ಟಿಕ್‌ಗಳಿಂದ ಕೂಡ ನಶ್ಯಡಬ್ಬಗಳುಳ್ಳ ನಿರ್ಮಾಣಗೊಳ್ಳುತ್ತವೆ.

ಎರ್‍ಮುಳ್ಳು/ಹೆರೆಮಣೆ
ತೆಂಗಿನ ಕಾಯಿ ತುರಿಯಲು ಬಳಸುವ ವಸ್ತು. ತೆಂಗಿನಕಾಯಿಯನ್ನು ಇದರ ಹಲ್ಲುಗಳಿಂದ ತುರಿದಾಗ ಕಾಯಿ ಸಣ್ಣ ಸಣ್ಣ ತುರಿಗಳಾಗಿ ಕೆಳಗೆ ಉದುರುತ್ತದೆ. ಕಬ್ಬಿಣದ ತಗಡನ್ನು ಅಲ್ಲಿಲ್ಲಿ ಮೇಲ್ಮುಖವಾಗಿ ಬಾಗಿಸಿ ಸಾಲು ಸಾಲು ಹಲ್ಲುಗಳು ಬರುವಂತೆ ರಚನೆ ಮಾಡಿರುತ್ತಾರೆ. (ಇದು ಇತ್ತೀಚಿನ ಚೌಕ/ಆಯತಾಕಾರದ ತುರಿಮಣೆಗಳಲ್ಲಿರುತ್ತವೆ). ಆಯತಾಕಾರದಲ್ಲಿರುವ ಇದರ ಮಣೆಯ ನಾಲ್ಕು ಮೂಲೆಗಳು ಭದ್ರವಾಗಿ ನೆಲದಲ್ಲಿ ಸ್ಥಾಪಿತವಾಗಲು ಕಾಲುಗಳನ್ನು ಜೋಡಿಸುತ್ತಾರೆ. ಉದ್ದಗಲಗಳು ೬x೪ ಇಂಚು, ಎರಡು ಇಂಚು ಎತ್ತರ ಇರುತ್ತವ.

ಎಳೆಗೌರಮ್ಮನ ಮೂರ್ತಿ
ಚೌತಿಹಬ್ಬದ ನಾಲ್ಕನೆಯ ದಿನ ಎಂದರೆ ಅಷ್ಟಮಿಯ ದಿನ ಈ ಮೂರ್ತಿಯನ್ನು ನೀರು ತುಂಬಿದ ಕೊಡದಲ್ಲಿರಿಸಿ ಪೂಜಿಸುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಇದು ಒಂದು ಮನುಷ್ಯಮುಖ ಪ್ರಮಾಣದ ಮುಖ. ಇದನ್ನು ಕೊಡದಲ್ಲಿ ಇಡುವುದಕ್ಕೆ ಅನುಕೂಲವಾಗುವಂತೆ ಇದರ ಕೊರಳನ್ನು ವಿನ್ಯಾಸಗೊಳಿಸಲಾಗಿದೆ. ಯಕ್ಷಗಾನದ ಹಳೆಯ ಸ್ತ್ರೀವೇಷದಂತೆ ಹಿಂದಲೆಯ ಮೇಲ್ಭಾಗದಲ್ಲಿ ಒಂದು ಕಿರೀಟಾಕೃತಿಯೂ ಕೊರಳಲ್ಲಿ ಅಡ್ಡಿಕೆಗಳೂ ಇವ. ಅಂತೆಯೇ ಕಿವಿಗೆ ಓಲೆ, ಮೂಗಿಗೆ ನತ್ತು ಇರಿಸಲು ಅನುಕೂಲವಾಗುವಂತೆ ರಚಿಸಲಾಗಿದೆ. ಮುಂದಿನ ವರ್ಷಗಳಲ್ಲೂ ಇದೇ ಸಂದರ್ಭದಲ್ಲಿ ಈ ಮೂರ್ತಿಯನ್ನು ಬಳಸಿಕೊಳ್ಳುವಂತೆ ಪೂಜೆಯ ಬಳಿಕ ಜೋಪಾನವಾಗಿಡುತ್ತಾರೆ. ಈ ಮೂರ್ತಿಯನ್ನು ಬೇವಿನ ಮರದಿಂದ ತಯಾರಿಸುತ್ತಾರೆ.


logo