logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಗೊಟ್ಟ
ಜಾನುವಾರುಗಳಿಗೆ ಔಷಧಿ ಕುಡಿಸಲು ಬಳಸುವ ಬಿದಿರ ಅಂಡೆ. ಬಿದಿರ ತುಂಡಿನಲ್ಲಿ ಒಂದು ಗಂಟನ್ನು ಹಾಗೆಯೇ ಉಳಿಸಿಕೊಂಡು ಇನ್ನೊಂದು ತುದಿಯನ್ನು ಒಂದು ವಿಶಿಷ್ಟಕೋನದಲ್ಲಿ ಕತ್ತರಿಸಿಕೊಳ್ಳಲಾಗುತ್ತದೆ. ಇದರಿಂದ ಗೊಟ್ಟದ ತುದಿಯನ್ನು ಜಾನುವಾರುಗಳ ಬಾಯಿಯೊಳಕ್ಕೆ ಸೇರಿಸಿಕೊಳ್ಳಲು ಅನುಕೂಲವಾಗುತ್ತದೆ. ಸಣ್ಣಕರುಗಳಿಗೆ ಹಾಲು ಕುಡಿಸಲು ಚಿಕ್ಕ ಗೊಟ್ಟವನ್ನು ಬಳಸುತ್ತಾರೆ. ಇದು ಸುಮಾರು ಎಂಟು ಇಂಚಿನಿಂದ ಎರಡು ಅಡಿಗಳ ತನಕ ಉದ್ದವಿರುತ್ತದೆ. ಸುತ್ತಳತೆ ಕೂಡ ಬೇರೆ ಬೇರೆ ಇರುತ್ತದೆ. ಒಳ್ಳೆಯ ಬಿದಿರಿನಿಂದ ತಯಾರಿಸಿ ಜೋಪಾನವಾಗಿ ಇಟ್ಟುಕೊಂಡರೆ ಇದು ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ.

ಗೌರಿ ಮೂರ್ತಿ ಅಚ್ಚು
ಗೌರಿ ಹಬ್ಬದಲ್ಲಿ ಪೂಜಿಸಲು ಬಳಸುವ ನಿರ್ದಿಷ್ಟ ಗೌರಿ ಮೂರ್ತಿಯನ್ನು ತಯಾರಿಸಲು ಬಳಸುವ ಅಚ್ಚು. ಕಲಸಿದ ಆವೆ ಮಣ್ಣನ್ನು ಈ ಅಚ್ಚಿನಲ್ಲಿ ಹಾಕಿ ನಿಗದಿತ ಹೊತ್ತಿನ ಬಳಿಕ ಅಚ್ಚನ್ನು ಹೊರ ತೆಗೆದಾಗ ಮೂರ್ತಿ ರೂಪಗೊಳ್ಳುತ್ತದೆ. ಅಚ್ಚಿನ ಹೊರ ಮುಖ ನಯವಾಗಿದ್ದು ಒಳಭಾಗದಲ್ಲಿ ಮೂರ್ತಿಯ ಆಕಾರವು ಮಣ್ಣಿನಲ್ಲೂ ಮೂಡುವಂತೆ ತಯಾರಿಸಲಾಗಿದೆ. ತಲೆ ಕಿರೀಟ ಸಹಿತ ಎದೆಯ ವರೆಗೆ ಮೂರ್ತಿ ಮೂಡಿಬರುವಂತೆ ಸಂರಚನೆ ಇದೆ. ಇದು ಸುಮಾರು ಅರ್ಧ ಅಡಿ ಎತ್ತರವಿದ್ದು ಒಂದು ಇಂಚಿನಷ್ಟು ದಪ್ಪವಿರುತ್ತದೆ. ಸಾಂಸ್ಕೃತಿಕವಾಗಿ ಮಹತ್ವವಿರುವ ಗೌರಿ ಹಬ್ಬದಲ್ಲಿ ಜನರು ಇಂತಹ ಅಚ್ಚಿನಿಂದಾದ ಮೂರ್ತಿಯನ್ನು ಕೊಂಡು ಪೂಜಿಸುತ್ತಾರೆ. ಇದನ್ನು ಬಿಳಿಯ ಗಾರೆಯಿಂದ ತಯಾರಿಸಲಾಗಿದೆ.

ಗ್ವಾರೆ ಮಣೆ/ನೆಲ್ಲುಕೋರಿ
ಕಾಳು/ಧಾನ್ಯಗಳನ್ನು ಒಕ್ಕುವ ಸಂದರ್ಭದಲ್ಲಿ ತೆನೆಗಳಿಂದ ಪ್ರತ್ಯೇಕಿಸಲ್ಪಟ್ಟ ಕಾಳುಗಳನ್ನು ಒಂದೆಡೆ ಸೇರಿಸಲು ಬಳಸುವ ಉಪಕರಣ. ಇದರಲ್ಲಿ ಈಸು, ಮಣೆಗಳೆಂಬ ಭಾಗಗಳಿರುತ್ತವೆ. ಮಣೆಯ ಭಾಗದ ಮರದ ಹಲಗೆಯು ಅರ್ಧಚಂದ್ರಕಾರದಲ್ಲಿರುತ್ತದೆ. ಇದನ್ನು ಈಸಿನೊಂದಿಗೆ ಜೋಡಿಸಲಾಗುತ್ತದೆ. ಮಣೆಯು ಸುಮಾರು ಒಂದು ಅಡಿ ವ್ಯಾಸವಿರುತ್ತದೆ. ಈಸು ಸುಮಾರು ಐದು ಅಡಿ ಉದ್ದವಿರುತ್ತದೆ. ಗ್ವಾರಿಯನ್ನು ಒಣ ಅಡಕೆಯನ್ನು ಒಂದೆಡೆ ರಾಶಿ ಹಾಕುವುದಕ್ಕೂ ಬಳಸಿಕೊಳ್ಳುತ್ತಾರೆ. ಮಣೆಯನ್ನು ಸಾಗುವಾನಿ, ಹಲಸು ಮುಂತಾದ ಉತ್ತಮ ಜಾತಿಯ ಮರಗಳಿಂದ ತಯಾರಿಸಿಕೊಳ್ಳುತ್ತಾರೆ. ಮಣೆಯ ಒಂದು ಬದಿಯಲ್ಲಿ ಸೂರ್ಯ ಹಾಗೂ ಇನ್ನೊಂದು ಬದಿಯಲ್ಲಿ ಚಂದ್ರನ ಚಿತ್ರವನ್ನು ಕೊರೆದಿರುವುದಿದೆ. ಬ್ಯಾರಲ್‌ನ ಮುಚ್ಚಳವನ್ನು ಕತ್ತರಿಸಿಕೊಂಡು ಕೂಡ ಇತ್ತೀಚಿಗೆ ಗ್ವಾರಿಯನ್ನು ತಯಾರಿಸಿಕೊಳ್ಳುತ್ತಾರೆ.

ಚಕ್ಕಡಿ ಗಾಲಿ
ಚಕ್ಕಡಿಗಾಲಿಯು ಚಕ್ಕಡಿಯ ಒಂದು ಬಹುಮುಖ್ಯ ಭಾಗ. ವೃತ್ತಾಕಾರದಲ್ಲಿದ್ದು ಚಕ್ಕಡಿಯ ಎರಡು ಪಾರ್ಶ್ವಗಳಲ್ಲಿ ಮಧ್ಯದ ಬಟ್ಟಿ ಮರಕ್ಕೆ ಜೋಡಿಸಲಾಗಿರುತ್ತದೆ. ಗಾಲಿಯ ವ್ಯಾಸ ಐದು ಅಡಿ. ಮಧ್ಯಗುಂಬದ ವ್ಯಾಸ ಒಂದು ಅಡಿ, ಅಗಲ ಒಂದು ಅಡಿ, ಎಲೆ ಪಟ್ಟಿಯ ಅಗಲ ಮೂರು ಇಂಚು. ಹೊರಸುತ್ತಿನ ಅಗಲ ಏಳು ಇಂಚು ಹೊರ ಸುತ್ತಿನಲ್ಲಿ ಕಬ್ಬಿಣದ ಪಟ್ಟೆ ಇದೆ ಮಧ್ಯದ ಗುಂಬದಲ್ಲಿಯೂ ಎರಡೂ ಬದಿಗೆ ಎರಡೆರಡು ಬಳೆಗಳಿರುತ್ತವೆ. ಜಾಲಿಮರದಿಂದ ತಯಾರಿಸಲಾದ ಪಟ್ಟಿಗಳಿಂದ ಚಕ್ಕಡಿಯ ಗಾಲಿ ತಯಾರಿಸಲಾಗುತ್ತದೆ. ಚಕ್ಕಡಿಯು ಕೃಷಿ ಸಮುದಾಯದವರ ಅತ್ಯಗತ್ಯ ಸಲಕರಣೆಯಾಗಿದೆ.

ಚಕ್ಕಡಿ ಗುಂಭ/ಬಂಡಿಗುಂಭ
ಚಕ್ಕಡಿ ಗಾಲಿ ತಯಾರಿಕೆಗೆ ಪೂರಕವಾಗುವ ವಸ್ತು. ಇದು ಸುಮಾರು ಒಂದೂವರೆ ಅಡಿ ಎತ್ತರ ಅರ್ಧ ಅಡಿ ಅಗಲವಿದ್ದು, ವೃತ್ತಾಕಾರದಲ್ಲಿರುತ್ತದೆ. ಇದರ ಹೊರಬದಿಗೆ ಕಬ್ಬಿಣದ ಪಟ್ಟಿಯನ್ನು ಜೋಡಿಸಲಾಗುತ್ತದೆ. ಮಧ್ಯಭಾಗದಲ್ಲಿ ಹನ್ನೆರಡು ರಂಧ್ರಗಳಿರುತ್ತವೆ. ಅವುಗಳಿಗೆ ಸುಮಾರು ಎರಡೂವರೆ ಅಡಿಗಳಷ್ಟು ಉದ್ದದ ಮರದ ಎಲೆ/ಪಟ್ಟಿಗಳನ್ನು ಜೋಡಿಸಲಾಗುತ್ತದೆ. ಗುಂಭದ ಇಬ್ಬದಿಗಳಿಗೆ ಕೀಲುಎಣೆ ಹಾಕಿರುತ್ತಾರೆ. ಗುಂಭವನ್ನು ಹೆಚ್ಚಾಗಿ ಜಾಲಿಮರದಿಂದ

ಚಕ್ಕುಲಿ ಒತ್ತೊಳ್ಳು/ಒತ್ತೊರಳು
ಚಕ್ಕುಲಿ, ಕಾರಕಡ್ಡಿ ಮುಂತಾದ ತಿಂಡಿಗಳಿಗೆ ರೂಪುಕೊಡುವ ಸಾಧನ. ಸುಮಾರು ಮೂರು ಇಂಚು ಚೌಕಾಕಾರದ ಒರಳು ಮತ್ತು ಅದೇ ಅಳತೆಯ/ ಆಕಾರದ ಒತ್ತು ಇದರ ಅವಿಭಾಜ್ಯ ಅಂಗಗಳು. ಅವಕ್ಕೆ ಇಬ್ಬದಿಗಳಲ್ಲೂ ಹಿಡಿಕೆಗಳು. ಒರಳಲ್ಲಿ ಸುಮಾರು ಎರಡು ಇಂಚು ವ್ಯಾಸ ಮೂರು ಇಂಚು ಆಳದ ರಂಧ್ರ. ರಂಧ್ರದ ಕೆಳಗಿನ ಭಾಗದಲ್ಲಿ ಚಕ್ಕುಲಿ, ಕಾರಕಡ್ಡಿಯಂಥ ತಿಂಡಿಗಳಿಗೆ ಅನುಸಾರವಾಗಿ ಹಿಟ್ಟನ್ನು ಹೊರಹಾಕುವ ಲೋಹದ ಬಿಲ್ಲೆಗಳನ್ನು ಅಳವಡಿಸುವ ಅನುಕೂಲತೆ. ಚಕ್ಕುಲಿ ಹುರಿಯ ಗಾತ್ರವೈವಿಧ್ಯವನ್ನು ಆಗುಮಾಡುವಂತೆ ಬಿಲ್ಲೆಗಳಲ್ಲಿ ರಂಧ್ರವ್ಯತ್ಯಾಸವಿರುತ್ತದೆ. ಕಡಿಮೆ ಸುತ್ತಳತೆಯ, ರಂಧ್ರದ ಆಳದಷ್ಟೇ ಉದ್ದದ ಒತ್ತನ್ನು ಜೋಡಿಸಲಾಗುತ್ತದೆ. ಒತ್ತೊಳ್ಳನ್ನು ಬಳಸಲು ಕಡಿಮೆ ಬಲ ಸಾಕು. ಒತ್ತೊರಳುಗಳು ಸಾಗುವಾನಿ, ಹಲಸು ಮುಂತಾದ ಮರಗಳಿಂದ ತಯಾರಿಸಲಾಗುತ್ತದೆ.

ಚಂಚಿ/ಸಂಚಿ
ತಾಂಬೂಲದ ವಸ್ತುಗಳನ್ನು, ಹಣವನ್ನು ಇರಿಸಿಕೊಳ್ಳಲು ಗ್ರಾಮೀಣರು ಬಳಸಿಟ್ಟಕೊಳ್ಳುವ ಕಿರುಚೀಲಗಳು. ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋಗುವಾಗ ಗ್ರಾಮೀಣ ಮಹಿಳೆಯರು ಸೊಂಟದ ಪಟ್ಟಿ(ವಂಕಿ)ಗೆ ಚಂಚಿಯ ಕಸಿಯ ಮೂಲಕ ಕಟ್ಟಿಕೊಳ್ಳುತ್ತಾರೆ. ಎಲೆ, ಅಡಿಕೆ, ಸುಣ್ಣದ ಡಬ್ಬಿ, ತಂಬಾಕು ಮುಂತಾದವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಸಂಚಿಗಳ ಒಳಗೆ ಸಣ್ಣ ಸಣ್ಣ ಅರೆಗಳಿರುತ್ತವೆ.

ಚಟಾಕು
ದವಸ ಧಾನ್ಯಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಪರಿಕರ. ಇದು ಸುಮಾರು ನಾಲ್ಕು ಇಂಚು ಉದ್ದ ಎರಡು ಇಂಚು ವ್ಯಾಸ ಇದೆ. ಮೇಲ್ಭಾಗ ಮತ್ತು ತಳಭಾಗದಲ್ಲಿ ಅರ್ಧ ಇಂಚು ಅಗಲದ ಒಂದೊಂದು ಪಟ್ಟಿ ಇದೆ. ಚಟಾಕು ಪಾವಿನ ಅರ್ಧ ಭಾಗವಾಗಿರುತ್ತದೆ. ಇದನ್ನು ಕಬ್ಬಿಣದ ತಗಡಿನಿಂದ ತಯಾರಿಸಿದ್ದಾರೆ. ಅಡುಗೆ ಮೆನಗಳಲ್ಲಿ ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಬಳಕೆ ಮಾಡುತ್ತಿದ್ದರು.

ಚಟಿಗೆ / ಕಾಲುಂಗುರ
ಲಂಬಾಣಿ ಮಹಿಳೆಯರು ಕಾಲಿನ ಬೆರಳಿಗೆ ಧರಿಸುವ/ಹಾಕಿಕೊಳ್ಳುವ ಉಂಗುರ. ಲಂಬಾಣಿಗರು ತಮ್ಮ ಭಾಷೆಯಲ್ಲಿ ಚಟಿಗೆ ಎಂದು ಕರೆಯುತ್ತಾರೆ. ಇದನ್ನು ಮದುವೆ ಸಂದರ್ಭದಲ್ಲಿ ಗಂಡನ ಮನೆಯವರು ಮದುಮಗಳ ಕಾಲಿಗೆ ಹಾಕುವ ಸಂಪ್ರದಾಯವಿದೆ. ಬೆರಳಿಗೆ ತಕ್ಕಂತೆ ವಿವಿಧ ಗಾತ್ರ ಮತ್ತು ವಿನ್ಯಾಸದ ಕಾಲುಂಗುರಗಳಿವೆ. ಇದನ್ನು ಧರಿಸುವುದು ಮುತ್ತೈದೆತನದ ಸಂಕೇತವಾಗಿದೆ. ಸಿಲ್ವರ್, ಕಾಡುಬೆಳ್ಳಿ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ. ಗಂಡ ಸತ್ತವರು ಕಾಲುಂಗುರವನ್ನು ತೊಡಬಾರದೆಂಬ ನಿಷೇಧವು ಇವರಲ್ಲಿದೆ.

ಚಂದಾಳದ ಗೊಂಬೆ/ ಚಂದನದ ಗೊಂಬೆ
ಬಾಲಿಕೆಯರು ಋತುಮತಿಯದಾಗ ಈ ಗೊಂಬೆಗಳನ್ನು ಅವರಿಗೆ ಕೊಟ್ಟು ಅವರನ್ನು ಆರತಿ ಬೆಳಗಿ ಪೂಜಿಸುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿದೆ. ಈ ಗೊಂಬೆಗಳನ್ನು ತೇದು ಅದರ ರಸವನ್ನು ಕುಡಿದರೆ ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ. ಮೈಮೇಲೆ ಕೆಂಪುಬಿದ್ದಾಗಲೂ ಹುಳಕೀಟಗಳು ಹರಿದು ಚರ್ಮಕ್ಕೆ ಬಾಧೆಯಾದಾಗಲೂ ಇವನ್ನು ತೇದು ಹಚ್ಚಿದರೆ ಶಮನವಾಗುತ್ತದೆ ಎಂಬ ನಂಬಿಕೆಇದೆ. ಗರ್ಭಧರಿಸಿದ ಹಸುಗಳಿಗೆ ದೃಷ್ಟಿತಾಗದಂತೆಯೂ ಇದನ್ನು ಹಸುಗಳ ಕೊರಳಿಗೆ ಕಟ್ಟುತ್ತಾರೆ. ಎತ್ತುಗಳು ಕುಂಟುಬಿದ್ದಾಗ ಅದನ್ನು ನಿವಾರಿಸಲು ಇದರಿಂದ ಮೂರುಬಾರಿ ನಿವಾಳಿಸುತ್ತಾರೆ. ಆ ಸಂದರ್ಭದಲ್ಲಿ ಕುಂಟೆತ್ತು ನೆಟ್ಟಗಾಗಲಿ ಎಂಬ ಮಂತ್ರವನ್ನು ಉಚ್ಛರಿಸುತ್ತಾರೆ. ಚಂದನದ ಗೊಂಬೆಗಳು ನೆಟ್ಟಗೆ ನಿಲ್ಲಲು ತಳದಲ್ಲಿ ಪೀಠಗಳಿರುತ್ತವೆ. ಇವುಗಳ ಗಾತ್ರ ಮತ್ತು ವಿನ್ಯಾಸಗಳಲ್ಲಿ ವ್ಯತ್ಯಾಸಗಳಿದ್ದರೂ, ಸಾಮಾನ್ಯವಾಗಿ ಇವು ಸುಮಾರು ನಾಲ್ಕು ಇಂಚಿನಿಂದ ಒಂದಡಿ ಎತ್ತರದ ಗೊಂಬೆಗಳಿರುತ್ತವೆ. ಎಲ್ಲವೂ ಸ್ತ್ರೀ ವಿಗ್ರಹಗಳೆಂಬುದು ವಿಶೇಷ. ಇವು ಸಾಮಾನ್ಯ ಅರೆನಗ್ನವಾಗಿರುತ್ತವೆ. ಕೆಲವಕ್ಕೆ ಒಡ್ಯಾಣ ಮತ್ತು ಶಿರೋಭೂಷಣ ಧರಿಸಿದಂತೆ ಕೆತ್ತನೆ ಮಾಡುತ್ತಾರೆ. ಕೆಲವು ಗೊಂಬೆಗಳು ಎರಡು ಮಕ್ಕಳನ್ನು ಎತ್ತಿಕೊಂಡಂತೆ ರಚನೆಯಾಗಿರುವುದು, ಬಾಲಿಕೆಯರು ಮೊದಲಬಾರಿ ಋತುಮತಿಯಾದಾಗ ಅವರಿಗೆ ತಾಯ್ತನದ ಅನುಭವಕ್ಕೆ ತರಬೇತಿ ನೀಡುವ ರೀತಿಯ ಜನಪದ ಆರಚಣೆಗಳ ಅರ್ಥವನ್ನು ಸೂಚಿಸುವಂತೆ ಕಾಣುತ್ತದೆ.


logo